Monday, May 19, 2025
Homeರಾಜ್ಯಬೆಂಗಳೂರು ವಿಭಾಗಕನಕಪುರ: ಬಾಕಿ ವೇತನಕ್ಕಾಗಿ ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟನೆ

ಕನಕಪುರ: ಬಾಕಿ ವೇತನಕ್ಕಾಗಿ ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟನೆ

ಕನಕಪುರ: ಹದಿನಾಲ್ಕು ತಿಂಗಳ ಬಾಕಿ ವೇತನಕ್ಕೆ ಆಗ್ರಹಿಸಿ ಪೌರ ಕಾರ್ಮಿಕರಿಬ್ಬರು ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದರು. ಕನಕಪುರ ತಾಲ್ಲೂಕಿನ ಕಸಬಾ ಹೋಬಳಿಯ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದ್ದು, ಇದಾದ ಒಂದೇ ತಾಸಿನಲ್ಲಿ ಇಬ್ಬರ ವೇತನವನ್ನು ಪಾವತಿಸಲಾಗಿದೆ. ಪಂಚಾಯಿತಿಯಲ್ಲಿ ಸ್ವಚ್ಛಗಾರರಾಗಿ ಕೆಲಸ ಮಾಡುತ್ತಿದ್ದ ಎನ್. ಸುರೇಶ್ ಮತ್ತು ವಿ. ರಂಗಯ್ಯ ಅವರಿಗೆ ಒಂದೂವರೆ ವರ್ಷದ ವೇತನ ತಲಾ 1.60 ಲಕ್ಷ ರೂಪಾಯಿ ಬಾಕಿ ಇತ್ತು. ವೇತನಕ್ಕಾಗಿ ಪಂಚಾಯಿತಿ ಅಧಿಕಾರಿಗಳನ್ನು ಕೇಳಿ ಬೇಸತ್ತ ಕಾರ್ಮಿಕರು, ಮಧ್ಯಾಹ್ನ ಬಿಂದಿಗೆಯಲ್ಲಿ ಮಲ ತೆಗೆದುಕೊಂಡು ಬಂದು ಪಂಚಾಯಿತಿ ಎದುರು ಮೈ ಮೇಲೆ ಸುರಿದುಕೊಂಡಿದ್ದಾರೆ. ಬಳಿಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಇಬ್ಬರ ವೇತನವನ್ನು ಲೆಕ್ಕಾಚಾರ ಮಾಡಿ, ಚೆಕ್ ಮತ್ತು ನಗದು ಮೂಲಕ ಪಾವತಿಸಿದ್ದಾರೆ.

‘ಬಾಕಿ ವೇತನ ಕುರಿತು ನನಗೂ ತಿಳಿಸದ ಪೌರ ಕಾರ್ಮಿಕರು, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಕಾರ್ಯಕರ್ತರೊಂದಿಗೆ ಪಂಚಾಯಿತಿಗೆ ಬಂದು ಮಲ ಸುರಿದುಕೊಂಡ ಪ್ರತಿಭಟಿಸಿದ್ದಾರೆ. ನಂತರ, ಇಬ್ಬರಿಗೆ ತಲಾ 1,10,400 ರೂಪಾಯಿ ಮೊತ್ತದ ಚೆಕ್ ಮತ್ತು 50 ಸಾವಿರ ನಗದು ನೀಡಿ ಬಾಕಿ ಸಂಬಳ ಪಾವತಿಸಿದ್ದೇವೆ’ ಎಂದು ಕಲ್ಲಹಳ್ಲಿ ಪಿಡಿಒ ಶ್ರೀನಿವಾಸ್ ಮಾಹಿತಿ ನೀಡಿದರು.

‘ಇಬ್ಬರೂ ಕಾರ್ಮಿಕರಿಗೆ 2021ರಿಂದ 14 ತಿಂಗಳ ಸಂಬಳವನ್ನು ಹಿಂದಿನ ಪಿಡಿಒಗಳು ಬಾಕಿ ಉಳಿಸಿದ್ದರು. ನನ್ನ ಅವಧಿಯಲ್ಲಿ ಯಾವುದೇ ಬಾಕಿ ಇರಲಿಲ್ಲ. ಕಾರ್ಮಿಕರಿಗೆ ತಿಂಗಳಿಗೆ 15 ಸಾವಿರ ಸಂಬಳ ನೀಡಲಾಗುತ್ತಿತ್ತು. ಎರಡು ತಿಂಗಳಿಂದ ಕೆಲಸಕ್ಕೆ ಹಾಜರಾಗದ ಕಾರ್ಮಿಕರು, ಕನಕಪುರದಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ಬಂದಿತ್ತು’ ಎಂದು ಹೇಳಿದರು.

‘ಬಾಕಿ ವೇತನಕ್ಕಾಗಿ ಕಾರ್ಮಿಕರು ಮೈ ಮೇಲೆ ಸುರಿದುಕೊಳ್ಳಬಾರದಿತ್ತು. ವಿಷಯವನ್ನು ನನ್ನ ಗಮನಕ್ಕೆ ತಂದಿದ್ದರೆ, ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳುತ್ತಿದ್ದೆ’ ಎಂದು ಕನಕಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ ತಿಳಿಸಿದರು.